Friday, 8 May 2020

Kannada Kavana about Brother


ಅಣ್ಣನ ವರ್ಣನೆಯ ಬಣ್ಣನೆ 


 ಮನೆಯೆಂಬ ಮೊದಲ ಶಾಲೆಯ ಆತ್ಮೀಯ ಸಹಪಾಠಿ... 
ದೈವದ ಸೃಷ್ಟಿಯಲಿ ಈ ಅನುಬಂಧಕ್ಕೆ ಏನಿದೆ ಸರಿಸಾಟಿ 

 ಬಾಲ್ಯದ ಆಟ,ಓಡಾಟ,ಕಿತ್ತಾಟಗಳ ಸವಿನೆನಪುಗಳು ಉಂಟು ನಿನ್ನೊಡನೆ 
ಬೆಳೆದಂತೆಲ್ಲಾ ಪ್ರೀತಿಕೊಟ್ಟು ಆರೈಕೆಮಾಡುತ್ತಾ ನಿಂತೆ ನನ್ನೊಡನೆ ....

 ಒಂದೇ ಕರುಳ ಬಳ್ಳಿಯ ರಕ್ತಸಂಬಂಧಿ ನೀ ಸಹೋದರ ..... 
ಕುಟುಂಬವನು ನಲುಮೆಯಿಂದ ಪೋಷಿಸುತ್ತಿರುವ ಅನುರಾಗದಾಗರ 

 ಬೇಡಿದರು ಸಿಗದ ವರವಾಗಿ ನೀನಿರುವೆ ನನ್ನೀ ಜೀವಕೆ ......     
ನಿನ್ನಾಸರೆಯಲಿ ಜೊತೆಯಿರುವೆ ನಿನ್ನ ಸರಾಗ ಜೀವನ ಪಯಣಕೆ     

 ಎಲ್ಲರ ಒಳಿತನ್ನು ಬಯಸಿ  ಶ್ರಮಿಸುವ ನಾ ಕಂಡ ಸಹಜೀವಿ
ಜೀವನದಲಿ ನಗು-ನಗುತಾ ಆಗಿರು ನೀ ಸದಾ ಚಿರಂಜೀವಿ 

Thursday, 1 November 2012

History about Ghati Subrahmanya Temple

ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಿರು                                ಪರಿಚಯ 

        ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಮಧ್ಯ  ಸುಬ್ರಹ್ಮಣ್ಯವೆಂದೆ ಖ್ಯಾತಿಯಾಗಿದೆ. ಶ್ರೀ ಕ್ಷೇತ್ರದ ದೇವಾಲಯದ ಗೋಪುರವು  ದೂರದಿಂದಲೇ  ಗೋಚರಿಸುತ್ತಾ,  ಭಕ್ತರಿಗೆ   ಭಯವನ್ನು   ಹೋಗಲಾಡಿಸಿ  ಅಭಯ  ನೀಡುವಂತಿದೆ. 
ಶಿವ ಪುತ್ರನಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಉತ್ತರದ ಹಿಮಾಲಯದಿಂದ ದಕ್ಷಿಣದ ಕಡೆಗೆ ಏಕೆ ಬಂದು ನೆಲೆಸಿದ ಎಂಬುದಕ್ಕೆ ಒಂದು ಅಧ್ಬುತ ಮಹಾ ಮಹಿಮಾ ಕತೆ ಇದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯು  ಜನಿಸಿದ ಮತ್ತು ದಕ್ಷಿಣಕ್ಕೆ ಬಂದು ನೆಲೆಸಿದ ಕಾರಣ "ದುಷ್ಟ ಶಿಕ್ಷಣೆಗೆ - ಶಿಷ್ಟ ರಕ್ಷಣೆಗೆ ". ಶ್ರೀ ಘಾಟಿ ಕ್ಷೇತ್ರದ ಬಗ್ಗೆ ತಿಳಿಯಬೇಕಾದರೆ ಆದಿ ಸುಬ್ರಹ್ಮಣ್ಯನಾದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬಗ್ಗೆ ತಿಳಿಯ ಬೇಕು. 

ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಗೋಪುರ 

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನನ:

         ಒಮ್ಮೆ ಪರಶಿವನು ತ್ರಿಪುರಾಸುರನನ್ನು ಸಂಹರಿಸಿದನು. ನಂತರ ತ್ರಿಪುರಾಸುರನ ಮಕ್ಕಳಾದ ತಾರಕಾಸುರ, ಸಿಂಹವಕ್ರ, ಗಜಾಸ್ಯ, ಶೂರಪದ್ಮರು ಹದಿನಾಲ್ಕುಲೋಕಗಳನ್ನು ಪೀಡಿಸತೊಡಗಿದರು. ಈ ರಾಕ್ಷಸರ ಕಾಟ ತಾಳಲಾರದೆ ಎಲ್ಲರೂ ಬ್ರಹ್ಮದೇವನನ್ನು ಬೇಡಿಕೊಂಡರು ,ನಂತರ ಅವರೆಲ್ಲರೂ ಪರಿಹಾರಕ್ಕೆ ಶ್ರೀ ಹರಿಯ ಮೊರೆ ಹೊಕ್ಕರು. ಆಗ ವಿಷ್ಣುವು "ಪರಶಿವನು ಪಾರ್ವತಿಯನ್ನು ವಿವಾಹವಾಗಬೇಕು, ಅವರಿಗೆ ಜನಿಸಿದ ಮಗುವಿನಿಂದ ಈ ರಾಕ್ಷಸರ ಸಂಹಾರವೆಂದು " ಪರಿಹಾರ ಮಾರ್ಗವನ್ನು ಸೂಚಿಸಿದನು.

ಶ್ರೀ ವಿಷ್ಣುವು ದೇವತೆಗಳಿಗೆ ಪರಿಹಾರವನ್ನು ಸೂಚಿಸುತ್ತಿರುವುದು 

       ನಂತರ ದೇವತೆಗಳು, ದಕ್ಷಯಜ್ಞದಲ್ಲಿ ಆಹುತಿಯಾದ ತನ್ನ ದಾಕ್ಷಾಯಣಿಯ ವಿರಹದಿಂದ ತಪದಲ್ಲಿ ಕುಳಿತ ಪರಶಿವನಲ್ಲಿ ಗಿರಿಜೆಯ ಮೇಲೆ ಪ್ರೀತಿ ಉಂಟು ಮಾಡಲು ಮನ್ಮಥನನ್ನು ಕಳಿಸಿದರು. ಮನ್ಮಥ ತನ್ನ ಪಂಚಬಾಣಗಳನ್ನು ಪ್ರಯೋಗಿಸಿ ಶಿವನ ಧ್ಯಾನವನ್ನು ಭಂಗಗೊಳಿಸಿ, ತಾನು ಶಿವನ ಕೋಪಕ್ಕೆ ಬಲಿಯಾಗಿ ಭಸ್ಮವಾದ. ನಂತರ ಶಿವ - ಪಾರ್ವತಿಯರ ಕಲ್ಯಾಣವು ನಡೆಯಿತು.


ಮನ್ಮಥನು ಶಿವನ ಮೇಲೆ ಪಂಚಬಾಣವನ್ನು ಪ್ರಯೋಗಿಸುತ್ತಿರುವುದು 








ಶಿವ ಪಾರ್ವತಿಯರ ಕಲ್ಯಾಣ




            ಶಿವ - ಪಾರ್ವತಿಯರು  ಏಕಾಂತ   ಸುಖದಲ್ಲಿ  ಇರುವಾಗ , ದೇವಗಣದ   ಆಣತಿಯಂತೆ     ಅಗ್ನಿದೇವನು 
ಶಿವ - ಪಾರ್ವತಿಯರ ಏಕಾಂತ   ಮಂದಿರಕ್ಕೆ ಬಂದನು . ಆಗ  ತಾನೇ  ಹೊರಬಿದ್ದ  ಶಿವತೇಜ  ಅಗ್ನಿ   ದೇವನನ್ನು ಹಿಂಬಾಲಿಸಿತು . ಅಗ್ನಿದೇವ ಭಯದಿಂದ ಹೆದರಿ ಓಡಿ , ಗಂಗೆಯಲ್ಲಿ ಅಡಗಿದ. ಆಗ ಶಿವ-ತೇಜವು ಸಹ ಗಂಗೆಯನ್ನು ಹೊಕ್ಕಿದಾಗ, ಅದು ಶಾಂತವಾಗಿ ಆರು ಭಾಗಗಳಾದವು. ಆ ಆರು ಭಾಗಗಳು ಆರು ಮಕ್ಕಳ ರೂಪತಾಳಿದವು. ಆ ಆರು    ಮಕ್ಕಳನ್ನು   ಋಷಿ   ಪತ್ನಿಯರು  ಎತ್ತಿಕೊಂಡರು .  ವಿಷಯ  ತಿಳಿದ  ಪಾರ್ವತಿಯು  ಆ  ಆರು  ಮಕ್ಕಳನ್ನು ಬಿಗಿದಪ್ಪಿದಾಗ ಒಂದು ದೇಹ, ಆರು ಮುಖಗಳುಳ್ಳ ಷಣ್ಮುಖನಾದ.


ಶಿವನ ತೇಜವು ಆರು ಮಕ್ಕಳ ರೂಪ ತಾಳಿರುವುದು 




ಷಣ್ಮುಖ ರೂಪ ತಾಳಿರುವುದು 

           ಒಮ್ಮೆ ಷಣ್ಮುಖನಾದ ಸುಬ್ರಹ್ಮಣ್ಯಸ್ವಾಮಿಯು ಓಂಕಾರದ ಅರ್ಥವನ್ನು ಹೇಳಿದ ಬ್ರಹ್ಮನನ್ನು ಬಂಧಿಸಿದ. ಶಿವನು ಬಂದು ಸುಬ್ರಹ್ಮಣ್ಯನಿಗೆ ಬುದ್ಧಿವಾದ ಹೇಳಿ ಬ್ರಹ್ಮನನ್ನು ಬಂಧ ಮುಕ್ತನನ್ನಾಗಿ ಮಾಡಿದ. ಚತುರ್ಮುಖ ಬ್ರಹ್ಮನನ್ನು ಬಂಧಿಸಿದ ತಪ್ಪಿಗಾಗಿ ಸುಬ್ರಹ್ಮಣ್ಯ ಸ್ವಾಮಿಯು  ಬಹಳ ನೊಂದುಕೊಂಡು, ಅದಕ್ಕೆ ಶಿಕ್ಷೆ ವಿಧಿಸಿಕೊಳ್ಳಬೇಕೆಂದು ತೀರ್ಮಾನಿಸಿ ತಾನೊಂದು ಘಟ ಸರ್ಪವಾಗುವಂತೆ ತನ್ನನ್ನು ತಾನೇ ಶಪಿಸಿಕೊಂಡ. ಸರ್ಪ ರೂಪ ಧರಿಸಿಕೊಂಡು ಸುಬ್ರಹ್ಮಣ್ಯ ಸ್ವಾಮಿಯು ದಕ್ಷಿಣ ಭಾರತದ ವಲ್ಮೀಕ ಕ್ಷೇತ್ರವಾದ ಕುಕ್ಕೆ ಕ್ಷೇತ್ರದಲ್ಲಿ ಒಂದು ವಲ್ಮೀಕದಲ್ಲಿದ್ದು ತಾಪವನ್ನು ಮಾಡತೊಡಗಿದ. ಗರುಡನ ಭಾದೆಯಿಂದ ಭಯಗೊಂಡ ಸರ್ಪಗಳಲ್ಲಿ ತಕ್ಷಕ, ವಾಸುಕಿ ಮುಂತಾದವರು ನಾರದರ ಉಪದೇಶದಂತೆ ಕುಕ್ಕೆ ಕ್ಷೇತ್ರಕ್ಕೆ ಬಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿದರು. ಸರ್ಪಗಳಿಗೆ ಗರುಡನ ಭೀತಿಯನ್ನು ತಪ್ಪಿಸಲು ಸುಬ್ರಹ್ಮಣ್ಯ ಸ್ವಾಮಿಯು ಶ್ರೀ ಹರಿಯನ್ನು ಪ್ರಾಥಿಸಿದನು. ಶ್ರೀ ಹರಿಯು ಪ್ರಸನ್ನನಾಗಿ ಲಕ್ಷೀ ನರಸಿಂಹ ರೂಪದಲ್ಲಿ ಸುಬ್ರಹ್ಮಣ್ಯಸ್ವಾಮಿಯ ಬೆನ್ನಲ್ಲಿ ನಿಂತು ಸರ್ಪಗಳಿಗೆ ಅಭಯ ನೀಡಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಕುಮಾರ ಸ್ವಾಮಿಯಾಗಿ ತಾರಕಾಸುರ, ಸಿಂಹವಕ್ರ, ಗಜಾಸ್ಯ, ಶೂರಪದ್ಮರನ್ನು ಸಂಹಾರ ಮಾಡಿ ಎಲ್ಲಾ ಲೋಕಗಳಿಗೂ ಮಂಗಳವನ್ನುಂಟುಮಾಡಿದ.


ಲಕ್ಷ್ಮೀ ನರಸಿಂಹಸ್ವಾಮಿ ಸರ್ಪಗಳಿಗೆ ಅಭಯ ನೀಡುತ್ತಿರುವುದು 


ಕುಮಾರ ಸ್ವಾಮಿಯಿಂದ ರಾಕ್ಷಸರ ಸಂಹಾರ

        ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಘಾಟಿ ಕ್ಷೇತ್ರಕ್ಕೆ ಬಂದು ನೆಲೆಸಿದ್ದು ಸಹ "ದುಷ್ಟ ಶಿಕ್ಷಣೆಗೆ - ಶಿಷ್ಟ ರಕ್ಷಣೆಗೆ ". ಅಂದಿನ ಕಾಲದಲ್ಲಿ ಘಾಟಿ ಕ್ಷೇತ್ರದಲ್ಲಿ ಘಟಿಕಾಸುರನೆಂಬ ರಾಕ್ಷಸನಿದ್ದ. ಅವನು ಲೋಕ ಕಂಟಕನಾಗಿ ಹಾಗು ಪ್ರಜಾ    ಪೀಡಕನಾಗಿದ್ದ. ಈ ಕ್ಷೇತ್ರದಲ್ಲಿ ಇದ್ದ ಗಾರ್ಗೇಯ, ಮಾರ್ಕಂಡೇಯ ಮುಂತಾದ ಋಷಿ ಮುನಿಗಳು ಬೇಡಿದಾಗ ಸುಬ್ರಹ್ಮಣ್ಯ ಸ್ವಾಮಿಯು ಈ ಕ್ಷೇತ್ರಕ್ಕೆ ಬಂದು ಆ ರಾಕ್ಷಸನನ್ನು ಘೋರ ಯುದ್ಧದಲ್ಲಿ ಸಂಹಾರ ಮಾಡಿದ. ಋಷಿ ಮುನಿಗಳ ಪ್ರಾರ್ಥನೆಯನ್ನು ಮನ್ನಿಸಿ ಇದೇ ಕ್ಷೇತ್ರದಲ್ಲಿ ನೆಲೆಸಿದ. ಅಂದಿನಿಂದ ಈ ಕ್ಷೇತ್ರಕ್ಕೆ ಮಧ್ಯ ಸುಬ್ರಹ್ಮಣ್ಯವೆಂದು ಹೆಸರು ಬಂತು. 


ಸ್ವಾಮಿಯಿಂದ ಘಟಿಕಾಸುರನ ಸಂಹಾರ


             ಘಾಟಿ ಕ್ಷೇತ್ರದಲ್ಲಿ ಸ್ವಾಮಿಯು ಏಳು ಎಡೆಯ ಸರ್ಪರೂಪದಲ್ಲಿ ತನ್ನ ಬೆನ್ನಲ್ಲಿ ಶ್ರೀ ಲಕ್ಷೀ ನರಸಿಂಹಸ್ವಾಮಿಯನ್ನು ಹೊತ್ತು ಹರಿಹರರಲ್ಲಿ ಭೇದವಿಲ್ಲವೆಂದು ತೋರುತ್ತ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ. ಇಲ್ಲಿಗೆ  ಸ್ವಾಮಿಯು ಬಂದು ನೆಲೆಸಿ ಯುಗಗಳೇ ಕಳೆದರು ಬೆಳಕಿಗೆ ಬಂದದ್ದು ಸುಮಾರು 600 ವರ್ಷಗಳ ಹಿಂದೆ. ಸ್ವಾಮಿಯು ಗೋಚರವಾಗಿದ್ದು ಸಹ ಒಂದು ಅಚ್ಚರಿಯ ಹಾಗು ಅದ್ಭುತ ರೀತಿಯಲ್ಲಿ. ಈ  ಕ್ಷೇತ್ರದ ಸಮೀಪದ ಹಳ್ಳಿಯಿಂದ ಒಬ್ಬ ವೀಳ್ಯದೆಲೆ ವ್ಯಾಪಾರಿ ಬೇರೆ ಊರುಗಳಿಗೆ ಈ ಕ್ಷೇತ್ರದ ಮೂಲಕ ಹೋಗುತ್ತಿದ್ದ. ಹಾಗೆ ಹೋಗಿ ಬರುವಾಗಲೆಲ್ಲಾ ಈ ಕ್ಷೇತ್ರದ ಒಂದು ಮರದ ಕೆಳಗಿನ ಶಿಲೆಯ ಮೇಲೆ ಮಲಗುತ್ತಿದ್ದ. ಹಾಗೆ ಮಲಗುವಾಗಲೆಲ್ಲಾ ಈ ಶಿಲೆಯ ಮೇಲೆ ಭಾರವಾಗಿ ಏಕೆ ಮಲಗಿರುವೆ? ಏಳು ಮೇಲೇಳು ಎಂಬ ಧ್ವನಿ ಕೇಳಿಬರುತ್ತಿತ್ತು. ವ್ಯಾಪಾರಿ ಅದರ ಬಗ್ಗೆ ಗಮನ ಹರಿಸಲಿಲ್ಲ.ಒಂದು ದಿನ ಶ್ರೀ ಸುಬ್ರಹ್ಮಣ್ಯಸ್ವಾಮಿಯೇ  ಆ ವರ್ತಕನ ಕನಸಿನಲ್ಲಿ ಬಂದು ತಾನಿರುವ ಸ್ಥಳ ತೋರಿಸಿ,ನನ್ನ ಭಕ್ತರಾದ ಸೊಂಡೂರು ಮಹಾರಾಜರಿಗೆ ತಿಳಿಸಿ ಇಲ್ಲಿ ಗುಡಿ ಗೋಪುರಗಳನ್ನು ಕಟ್ಟಿಸುವಂತೆ ಮತ್ತು ಬೆಳಗ್ಗೆ ಇಲ್ಲಿಗೆ ಬರುವ ಬ್ರಾಹ್ಮಣ ಜೊತೆ ಸೊಂಡೂರಿಗೆ ಹೋಗುವಂತೆ ಹೇಳಿದ. ಅದೇ ರೀತಿಯಲ್ಲಿ ಅಲ್ಲಿಗೆ ಒಬ್ಬ ಬ್ರಾಹ್ಮಣನು ಬಂದ. ಸ್ವಾಮಿಯು ಅವರಿಬ್ಬರಿಗೂ ದರ್ಶನವನ್ನು ನೀಡಿದ. ನಂತರ ಇಬ್ಬರೂ ಸೊಂಡೂರಿಗೆ ಹೋಗಿ ಅಲ್ಲಿನ ಗೋರ್ಪಡೆ ಮಹಾರಾಜರನ್ನು ಕಂಡು ಎಲ್ಲವನ್ನು ಹೇಳಿದರು. ಸ್ವಾಮಿಯು ಸಹ ಮಹಾರಾಜರ ಕನಸಿನಲ್ಲಿ ಬಂದು ನಿಜ ಸಂಗತಿಯನ್ನು ತಿಳಿಸಿದನು.


ಸ್ವಾಮಿಯು ಬ್ರಹ್ಮಣನಿಗು ಮತ್ತು ವರ್ತಕನಿಗು ದರ್ಶನ ನೀಡಿದ್ದು 


               ಮಾರನೇ  ದಿನವೇ ಮಹಾರಾಜರು ಘಾಟಿ ಕ್ಷೇತ್ರಕ್ಕೆ ಬಂದು ನೋಡಿದಾಗ, ಅಲ್ಲಿರುವ ಎಲ್ಲಾ ಕಲ್ಲುಗಳು ಹಾವಿನ ರೂಪದಲ್ಲಿರುವುದನ್ನು ಕಂಡು ಅಚ್ಚರಿಗೊಂಡರು. ಆಗ ಅಡುಗೆ ಮಾಡುವವರು ಅಡುಗೆ ಮಾಡಲು ಅಲ್ಲಿದ್ದ ಸ್ವಾಮಿಯ ಮೂಲ ರೂಪದ ಶಿಲೆಗೆ ಇನ್ನು ಎರಡು ಗುಂಡುಗಳನ್ನು ಸೇರಿಸಿ ಅಡುಗೆ ಮಾಡಿದಾಗ ಪಾತ್ರೆಯಲ್ಲಿನ ಪದಾರ್ಥವೆಲ್ಲವು ರಕ್ತದಂತೆ ಕಂಡಿತು. ಆ ಹುತ್ತದ ಮೇಲೆ ಈಗಿನ ಪಲ್ಪಾಲ್ದಿನ್ನೆ  ಎಂಬ ಹಳ್ಳಿಯಿಂದ ಮೇವಿಗಾಗಿ ಬಂದ ಹಸುಗಳಲ್ಲಿ ಒಂದು ಹಸು ದಿನಾ ಈ ಹುತ್ತದಲ್ಲಿ ಹಾಲು ಸುರಿಯುತ್ತಿತ್ತಂತೆ. ಇದನ್ನು ತಿಳಿದ ಮಹಾರಾಜರು ಗೊಲ್ಲರ ಸಹಾಯದಿಂದ ಆ ಹುತ್ತವನ್ನು ತೆಗೆದಾಗ ಒಳಗೆ ಶ್ರೀ ಲಕ್ಷ್ಮೀ ನರಸಿಂಹ ಸಮೇತರಾಗಿ ಹಾವಿನ ಆಕಾರದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಶಿಲೆಯನ್ನು ಕಂಡು ಭಯ ಭಕ್ತಿಗಳಿಂದ ಕೈ ಮುಗಿದು ನಿಂತರು.

ಹಸುವು ಹುತ್ತದಲ್ಲಿ ಹಾಲು ಸುರಿಯುತ್ತಿರುವುದು 

            ಸೊಂಡೂರಿನ ಗೋರ್ಪದೆ ಮಹಾರಾಜರು ಸ್ವಾಮಿಗೆ ಗರ್ಭ ಗುಡಿಯನ್ನು ನಿರ್ಮಿಸಿ ಕೆಲವು ಜಮೀನುಗಳನ್ನು ಸ್ವಾಮಿಗೆ ಧಾನವನ್ನಾಗಿ ನೀಡಿದರು. ಅಂದಿನ ಆ ಬ್ರಾಹ್ಮಣರ ವಂಶದವರೇ ಇಂದಿಗೂ ಸಹ ಈ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಕ್ಕದ ಹಳ್ಳಿಯ ಗೊಲ್ಲರ ಮನೆತನದವರೇ ರಥ ಎಳೆಯುವುದು, ಉತ್ಸವಾದಿಗಳನ್ನು ಹೊರುವುದನ್ನು ಮಾಡುತ್ತಿದ್ದಾರೆ.



ಮಹಾರಾಜರಿಂದ ಸ್ವಾಮಿಯ ಗರ್ಭಗುಡಿಯ ನಿರ್ಮಾಣವಾದುದು 

                  ಘಾಟಿ ಕ್ಷೇತ್ರದಲ್ಲಿ ಸ್ವಾಮಿಯು ಏಳು ಎಡೆಗಳನ್ನು ಉಳ್ಳವನಾಗಿ ಪುರ್ವಾಭಿಮುಖವಾಗಿಯು , ಶ್ರೀ ಲಕ್ಷ್ಮೀ ನರಸಿಂಹಸ್ವಮಿಯು ಪಶ್ಚಿಮಾಭಿಮುಖವಾಗಿಯು ಇದ್ದಾರೆ .ಅಂದಿನಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಈ ಕ್ಷೇತ್ರದಲ್ಲಿ ಪ್ರಕಟವಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ , ಪೂಜೆ ಸೇವೆಗಳನ್ನು ಪಡೆಯುತ್ತಾ ನಲಿಯುತ್ತಿದ್ದಾನೆ.


ಶ್ರೀ ಸುಬ್ರಹ್ಮಣ್ಯ ಸ್ವಾಮಿ ಲಕ್ಷ್ಮೀ ನರಸಿಂಹ ಸ್ವಾಮಿಗಳ ಸಮೇತವಾಗಿ 




Wednesday, 17 October 2012

kannada kavana about Mother


ಅಮ್ಮ ..


amma

ಅಮ್ಮ ನಿನ್ನ ಬಣ್ಣಿಸುವ ಶಕ್ತಿ - ಸಾಮರ್ತ್ಯ ನನಗಿಲ್ಲಮ್ಮ .....................
ಪ್ರತಿಯೊಂದು ಜೀವಿಯ ಬೆಳವಣಿಗೆಯ ಆರಂಭ ನಿನ್ನ ಮಡಿಲಿನಲ್ಲಮ್ಮ

ನಿನ್ನೊಡಲಲಿ ನವಮಾಸ ಹೊತ್ತು , ಜನ್ಮ ನೀಡುವೆ ನಿನ್ನಾಸೆಯ ರೂಪಕೆ 

ಪುನರ್ಜನ್ಮದ ಸಂಕಟ-ಆನಂದ ಪಡುವೆ, ತಾಯ್ತನದ ಹರಕೆಯ ಬಯಕೆಗೆ

ನೋವು - ನಲಿವಿನ ಕ್ಷಣಗಳಲಿ ಮೊದಲು ನೆನಪಾಗುವ ಪದವೇ ನೀ ಅಮ್ಮ

ಮಗಳಾಗಿ ಮಡದಿಯಾಗಿ ತಾಯಿಯಾಗಿ ಬಾಳ ಬೆಳಗಿಸುವವಳು ನೀನೆ ಅಮ್ಮ 

ಅಕ್ಕರೆಯಿಂದ ಎಲ್ಲರನ್ನು ಪೋಷಿಸುವೆ ನಮ್ಮೆಲ್ಲರ ನೆರಳಾಗಿ ...........

ಸದಾ ಜೊತೆಗಿರುವೆ ನಮ್ಮೆಲ್ಲಾ ಸುಖ-ದುಃಖಗಳಲಿ ಕಣ್ ರೆಪ್ಪೆಯಾಗಿ   

ಅಮ್ಮ ನೀನೊಂದು ಪ್ರೀತಿ, ಕರುಣೆ, ತ್ಯಾಗಗಳ ಸಾಗರ .............................

ನಿನ್ನೊಳಗೆ ಎಷ್ಟೇ ದುಃಖ-ದುಮ್ಮಾನಗಳಿದ್ದರು ನೀ ಆಗಿರುವೆ ಸದಾ ಪ್ರೀತಿಯ ಆಗರ

ನಿನ್ನ ಮಡಿಲಿನ ಆಶ್ರಯದಲ್ಲಿ ಮಲಗಿದರೆ ನನಗದೆ ಸ್ವರ್ಗ ಸೋಪಾನ....

ನಿನ್ನನ್ನು ಅತಿಯಾಗಿ ಕಾಡಿಬೇಡುವುದು ನನಗಿಷ್ಟ ನೀ ಬಯಸಿದರು ನನ್ನ ಜೋಪಾನ

ನಿನ್ನೊಲುಮೆ ಇಲ್ಲದೆ ಮನುಷ್ಯ ಜೀವನ ಅಪೂರ್ಣ ತಾಯೇ .................

ನಾ ಬಯಸುವೆ ನಿನ್ನ ಸಂಪೂರ್ಣ ಅನುಗ್ರಹದ ಛಾಯೆ .......................  


Thursday, 4 October 2012

Save Baby Girls

ಉಳಿಸಿ ಹೆಣ್ಣು ಕಂದಮ್ಮಗಳ 

ಬಾಳಿನ ದಾರಿಯಲ್ಲಿ ಹೆಣ್ಣು 

ನಿಮ್ಮ ಬಾಳಿನ ಉದ್ದಕ್ಕೂ ಕಣ್ಣಾಗಿ ಸಲಹುವಳು ಎಂದೆಂದಿಗೂ ಹೆಣ್ಣೇ ............
ನಿಮಗೆ ಜನ್ಮ ನೀಡಿ,ತನಗೆ ಪುನರ್ಜನ್ಮ ಪಡೆಯುವವಳು ಒಂದು ಹೆಣ್ಣು.........
ಅಕ್ಕ-ತಂಗಿಯಾಗಿ ಅಕ್ಕರೆಯಿಂದ ಕಾಣುವವಳು ಒಂದು ಹೆಣ್ಣು .....................
ನಿಮ್ಮ ಮಡದಿಯಾಗಿ ನಿಮ್ಮೆಲ್ಲಾ ಸುಖ-ದುಖಃ ಗಳನ್ನು ಹಂಚಿಕೊಳ್ಳುವವಳು ಹೆಣ್ಣು ..............
ಮತ್ತೆ ,ನಿಮ್ಮ ಕಂದಮ್ಮ ಮಾತ್ರ ಹೆಣ್ಣಾಗಿರುವುದು ಏಕೆ ಬೇಡ.......................?


Thursday, 27 September 2012

Kannada kavana about dreams

ಕನಸುಗಳು ಸುಂದರ ಲೋಕದ ಕಲ್ಪನೆಗಳು..........
ಅಲ್ಲಿ ನಮ್ಮ ಆಸೆ-ಆಕಾಂಕ್ಷೆಗಳೇ ಸ್ವತಂತ್ರ ಹಕ್ಕಿಗಳು 

 ಹಕ್ಕಿಗಳ ಸ್ವಚಂದ ಹಾರಾಟಕ್ಕೆ ಎಲ್ಲೆಯೇ ಇಲ್ಲ 
ಏಕೆಂದರೆ ಕನಸುಗಳಿರದ ಬದುಕೇ ಇಲ್ಲ ........

ಕನಸುಗಳು ಭಾವನಾಲೋಕದ ಪ್ರತಿಬಿಂಬ......................
ರೆಪ್ಪೆ ಮುಚ್ಚಿದೊಡನೆಯೇ ಅವುಗಳದೇ ಹಾರಾಟ ಕಣ್ತುಂಬ

ಬದುಕಿನ ಪಯಣದಿ ಉಜ್ವಲ ಭವಿಷ್ಯದ ಕನಸು ಕಾಣಬೇಕು 
ಅವುಗಳ ಸಾಕಾರಗೊಳಿಸಲು ಪರಿಶ್ರಮ ಪಡಲೇ ಬೇಕು 

ಎಂದಿಗೂ ಕನಸುಗಳು ಬಡಿದೆಬ್ಬಿಸಬೇಕು ನಮ್ಮನು ನಿದ್ದೆಯಲ್ಲೂ 
ಇಲ್ಲವಾದಲ್ಲಿ ಅವುಗಳೇ ಆಗುವವು ನಿದ್ದೆಯ ಗುಳಿಗೆಗಳೆಲ್ಲಲ್ಲೂ   

Friday, 21 September 2012

Kannada kavana about Mind

ಮನಸೇ ಓ ಮನಸೇ 



ಮನಸೇ ನೀನೊಂದು ಕಣ್ಣಿಗೆ ಕಾಣದ ಮಾಯೆ ..............
ಎಲ್ಲರನೂ ಕಾಡುವೆ ನೀ , ಹೀಗೇ ನೀ ಎಂದು ನಾ ಅರಿಯೆ

                                     ಒಮ್ಮೆ ನಗಿಸುವೆ,ಇನ್ನೊಮ್ಮೆ ಅಳಿಸುವೆ, ಏಕೆ ನೀ ಹೀಗೆ ?
                                     ನಾ ಸೋತಿರುವೆ, ನಿನ್ನ ಅರಿಯುವುದಾದರು ನಾ ಹೇಗೆ ? 

ಮನಸೇ ಓ ಮನಸೇ...  ನೀ ಅತಿ ಮೃದು ಮಧುರ 
ನಿನ್ನಿಂದಲೇ  ಉಗಮ ಬದುಕಿನ ಎಲ್ಲಾ ಆತುರ, ಕಾತುರ 

                                     ನಮ್ಮೆಲ್ಲಾ ಒಳಿತು-ಕೆಡಕುಗಳನು ಅರಿತಿರುವೆ ಸರಿಯಾಗಿ ನೀ .............
                                     ಒಮ್ಮೆ ಮುಕಾಗುವೆ, ಇನ್ನೊಮ್ಮೆ ಅರಿವು ಮೂಡುವೆ ಯಾಕಾಗಿ ಹೀಗೆ ನೀ?

ಎಲ್ಲಾ ಸಾಧನೆಗೂ ನೀನೆ ಸ್ಪೂರ್ತಿ, ನಿನ್ನಿಂದಲೇ ಬದುಕು.....
ನೀ ಕುರುಡಾದರೆ ನಶ್ವರವಾಗುವುದು ಈ  ಅಮೂಲ್ಯ ಬದುಕು

                                     ಸ್ವರ್ಗವೇ ಅಂಗೈಯಲ್ಲಿ ಇದ್ದಂತೆ ನೀ ನಲಿದರೆ.........
                                     ನೀ ಸಹಿಸಲಾರೆ ತೊಳಲಾಟವ ತುಸು ನೋವಾದರೆ

ಮನಸೇ ನಿನ್ನ ರೂಪು-ರೇಖೆಗಳು ಹಲವು-ಹಲವಾರು..........
ಒಬ್ಬೊಬ್ಬರಲಿ ಒಂದು ರೀತಿ, ಆದರೂ ನಾ ಅರಿವೆ ಕೆಲವಾರು

                                     ನಿನ್ನನ್ನು ಸದಾ ಸುಸ್ಥಿತಿಯಲ್ಲಿ ಇಡುವುದೇ ನನ್ನ ಆತುರ 
                                     ಆದರೆ ಬದುಕಿನ ಜಂಜಾಟದಲ್ಲಿ ಅದಾಗಿದೆ ದುಸ್ತರ ......     
                                         

Thursday, 30 August 2012

Kannada Kavana: No value to Relations without Love

ಪ್ರೀತಿಯೇ ಇಲ್ಲದ ಮೇಲೆ.....................

            ಬದುಕಿಗೆ ನೂರೆಂಟು ಸಂಬಂಧಗಳು ಬೇಕು 
            ಸಂಬಂಧಗಳ ನಡುವೆ ಪ್ರೀತಿ ಇರಬೇಕು

            ಪ್ರೀತಿಯೇ ಇಲ್ಲದ ಮೇಲೆ ಏನಿದೆ ಬದುಕಿಗೆ ಅರ್ಥ      

            ಏನೇ ಇದ್ದರೂ ಪ್ರೀತಿಯಿಲ್ಲದೆ  ಎಲ್ಲವೂ  ವ್ಯರ್ಥ
                         
           ಹುಟ್ಟಿನೊಂದಿಗೆ ಸಂಬಂಧಗಳ ಅಂಟಿಕೊಂಡು ಬರುವೆವು
           ಹಾಗೆ ಅವುಗಳೊಂದಿಗೇ ಅಂತ್ಯಕಾಣುವೆವು
          
          ನಡುವೆ ಬರುವ ಸಂಬಂಧಗಳು ಎಷ್ಟೋ 
          ಅವುಗಳಲಿ ಕೊನೆವರೆಗೂ ಉಳಿಯುವವು ಇನ್ನೆಷ್ಟೋ 
          ಸಂಬಧಗಳಿಂದ ಪಡುವ ಸುಖ-ದುಃಖಗಳು  ಅದಿನ್ನೆಷ್ಟೋ 
  
          ಸಂಬಧಗಳ ನಡುವೆ ಪ್ರೀತಿಯೆಂಬುದು ಅಮೂಲ್ಯ ರತ್ನ
          ಅದಕಾಗಿ ನಾವು ಪಡಲೇ ಬೇಕು ಯತ್ನ
       
          ಎಲ್ಲರೊಡನೆ ಒಳ್ಳೆಯ ಸಂಬಧಗಳ ಕಟ್ಟಿಕೊಳ್ಳೋಣ 
         ಪ್ರೀತಿಯಿಂದ ಪೋಷಿಸಿ ಅವುಗಳ ಉಳಿಸಿಕೊಳ್ಳೋಣ 


                                                                                                  - ಪ್ರೀತಿಯಿಂದ  ಯಮುನ